ಗಟ್ಸ್/ಗಡ್ಸ್ ಇರಬೇಕು??..
“ಹೇ.. ಸುಮ್ಮನಿರೆ.. ಅದಕ್ಕೆಲ್ಲ ಗಟ್ಸ್ ಇರ್ಬೇಕು”.”ನಿನಗೆ ಗಟ್ಸ್ ಇದ್ರೆ ಮಾಡಿ ತೋರಿಸು”. “ಗಟ್ಸ್ ಇಲ್ವಾ.. ಹಾಗಾದ್ರೆ ಸುಮ್ಮನಿರು” “ಅದು ಗಟ್ಸಸಪ್ಪಾ ..” ಹೀಗೆಲ್ಲಾ ಮಾತಾಡ್ಕೊಳ್ಳೋದನ್ನ ನಾವು ದಿನೇ ನಿತ್ಯ ಕೇಳುತ್ತೇವೆ. ಏನಿದು ಗಟ್ಸ್..? ಇದ್ದಿದ್ದನ್ನು ಇದ್ದ ಹಾಗೆಯೇ ಬಹಿರಂಗ ಪಡಿಸಲೂ.. ಈ ಗಟ್ಸ್ ಅನ್ನೋದು ಇರಬೇಕಾಗುತ್ತದೆ.
ಸತ್ಯವನ್ನು ಒಪ್ಪಿಕೊಳ್ಳಲೂ ಬೇಕಾಗುತ್ತದೆ. ಒಮ್ಮೊಮ್ಮೆ ಮಾಡಿದ ತಪ್ಪನ್ನು ಒಪ್ಪಿಕೊಳ್ಳಲೂ,ಶರಣಾಗಲೂ ಗಟ್ಸ್ ಇರಬೇಕಾಗುತ್ತದೆ.ಸುಳ್ಳನ್ನು ಅಥವಾ ತಪ್ಪನ್ನು ತಪ್ಪೆಂದು ಹೇಳಲೂ ಇದು ಬೇಕು!!.
ಹೇಡಿ ಪುಕ್ಕಲರಂತೆ ಬದುಕಿನ ಪ್ರಶ್ನೆಗೆ ಉತ್ತರಿಸದೆ ಓಡಿಹೋಗುವುದು ಸುಲಭ. ಅದೇ ತೆಗೆದುಕೊಳ್ಳುವ ನಿರ್ಧಾರಕ್ಕೆ, ಎದುರಾಗುವ ಪ್ರಶ್ನೆಗಳಿಗೆ, ಅದರ ಆಗು ಹೋಗುಗಳಿಗೆ ಉತ್ತರಿಸಬಲ್ಲೆನು ಎನ್ನುವ ಗಟ್ಸ್ ಇರಬೇಕು. ಇದ್ದರೆ ಮಾತ್ರ ಬದುಕಲ್ಲಿ ಮೇಲೆ ಬರಲು ಸಾಧ್ಯ. ಲಂಚ ತೆಗೆದುಕೊಳ್ಳುವವರಿಂದ ಹಿಡಿದು ಕೊಡುವವನ ವರೆಗೂ ಈ ಗಟ್ಸ್ ಬೇಕಾಗುತ್ತದೆ. ಹತ್ತು ಜನ ಸೈನಿಕರೆದುರು ಒಬ್ಬ ರಾಜ ಹೋರಾಡಬೇಕಾಗಿ ಬಂದರೂ ಆ ರಾಜನಲ್ಲಿ ತನ್ನ ಸೈನಿಕ ಬಳಗವಿಲ್ಲದೆಯೇ ಹತ್ತು ಜನ ಶತ್ರು ಸೈನ್ಯವನ್ನು ಎದುರಿಸುವ ಧೈರ್ಯೆವಿರಬೇಕು. ಒಂದು ಸ್ವಂತ ಉದ್ಯೋಗಕ್ಕೆ ಕೈ ಹಾಕಲೂ ಗಟ್ಸ್ ಇರಬೇಕು. ನಾಳೆ ಏನೇ ಲಾಭ ನಷ್ಟಗಳಾದರೂ ಎದುರಿಸಬಲ್ಲನು ಎನ್ನುವ ಆತ್ಮವಿಶ್ವಾಸವಿದ್ದರೆ ಮಾತ್ರ ಸ್ವಂತ ಉದ್ಯೋಗ ಸ್ವಂತವಾಗಲು ಸಾಧ್ಯ.! ಮಕ್ಕಳನ್ನು ಆರ್ಮಿಗೆ ಕಳುಹಿಸಲೂ ಹೆತ್ತವರಿಗೆ ಗಟ್ಸ್ ಬೇಕಪ್ಪಾ…!
ಮೊನ್ನೆ ತಾನೇ ಟಿವಿಯಲ್ಲಿ ತೆಲಂಗಣರಾಜ್ಯ ವಿಷಯವಾಗಿ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂದು ಕೈಗೂ ಸಿಗದಂತೆ ಓಡಿದ. ನಮ್ಮಿಂದ ಇದು ಸಾಧ್ಯವೇ?? ಇಲ್ಲ!!. ಗಟ್ಸ್ ಬೇಕು ಕಣ್ರಿ!. ಹೀಗೆಯೇ ಬರವಣಿಗೆ ವಿಷ್ಯಗಳೂ ಅಷ್ಟೇ.. ಇದ್ದುದನ್ನು ನೇರವಾಗಿಯೇ ಬರೆಯಲು ಅವರಿಗೂ ಗಟ್ಸ್ ಇರಬೇಕು. ಎಷ್ಟೋ ವಿಮರ್ಶೆಗಳು ಅದರ ಬಗ್ಗೆ ಹುಟ್ಟಿಕೊಳ್ಳಬಹುದು. ಬರವಣಿಗೆಯ ರೂಪದಿಂದ ಆ ಬರಹಗಾರನ ಸ್ವರೂಪವನ್ನಳೆಯುವವರೂ ಇದ್ದಾರೆ! ಇದೆಲ್ಲದಕ್ಕೆ ಉತ್ತರಿಸಿ ಇನ್ನೊಂದು ಬರವಣಿಗೆಯನ್ನು ಅವರ ಮುಂದಿದಲು ಬೇಕು.. ಈ ಗಟ್ಸ್!. ಮಾರಕ ರೋಗವನ್ನೆದುರಿಸಿ ಮೀರಿ ಬದುಕಲು ಇದು ಬೇಕು! ಪ್ರಪೋಸ್ ಮಾಡಿ ಪ್ರೀತಿಯನ್ನು ಜಯಿಸಲು ಗಟ್ಸ್ ಬೇಕೇ ಬೇಕು. ಹೆತ್ತ ತಂದೆತಾಯಂದಿರನ್ನು ಮುಪ್ಪಿನಲ್ಲಿ ನೋಡಿಕೊಳ್ಳುತ್ತಿರುವವರಿಗೂ ಗಟ್ಸ್ ಬೇಕು. ಸಮಾಜದ ತಾಳೆಗಳಿಗೆ, ಕಂಪಾರಿಶನ್ ಗಳಿಗೆ ವಿರುದ್ಧವಾದ ಕೆಲ್ಸವಾಗಿದೆಯಾದರೆ ಅಲ್ಲಿ ಗಟ್ಸ್ ಎನ್ನೋ ಪದ ಇದ್ದೇ ಇದೆ. ಏನೂ ಬೇಡ, ರಾಜ್ಯದ ಮುಖ್ಯಮಂತ್ರಿಗಳು ಮಾರುಕಟ್ಟೆಯಲ್ಲಿ ಬಾಡಿಗಾರ್ಡ್ ಇಲ್ಲದೆಯೇ ಕಾಲ್ನಡಿಗೆಯಲ್ಲಿ ಬರಲೂ ಗಟ್ಸ್ ಬೇಕು ಕಣ್ರಿ…!
ಈ ಗಟ್ಸ್ ಸಾಮಾನ್ಯರಲ್ಲಿ ಸ್ವಲ್ಪ ಮಟ್ಟಿಗೆ ಇದೆಯಾದರೂ, ಅದನ್ನು ಉಪಯೋಗಿಸುವಿದಿಲ್ಲ ಕಾರಣ.. ಒಂದು ರೀತಿಯ ಅಳುಕು,ಸಮಾಜ ಏನನ್ನುತ್ತೋ ಎನ್ನುವ ಭೀತಿ!! ನಮ್ಮನ್ನು ನಾವೇ ನಿಯಂತ್ರಿಸಲು ಯಾವಾಗ ಅಸಮರ್ಪಕರಾಗುತ್ತೇವೆಯೋ ಆಗ ಬೇರೆಯವರು ನಮ್ಮನ್ನು ನಿಯಂತ್ರಿಸುವುದರಲ್ಲಿ ಸಮರ್ಪಕರಾಗುತ್ತಾರೆ. ನಮ್ಮ ನಿರ್ಧಾರಗಳನ್ನು ನಿರ್ಧಿಷ್ಟವಾಗಿಟ್ಟು,ಬದುಕಲ್ಲಿ ಬದುಕಿ ತೋರಿಸುವುದು ಸಾದ್ಯ ಎನ್ನುವ ಮನೋಭಾವನೆ ಇದ್ದವನು ಉನ್ನತಕ್ಕೇರುತ್ತಾನೆ, ಇಲ್ಲವೋ ಸಾಮಾನ್ಯರಂತೆ ಜೀವಿಸುತ್ತಾನೆ. ಯಾವದೇ ರೋಲ್ ಮಾಡೆಲ್ ಗಳಿರಲಿ, ಅವರೆಲ್ಲ ಗಟ್ಸ್ ಇದ್ದವರು!. ಕ್ರಿಕೆಟಿಗ ಸಚಿನ್… ಎಲ್ಲರೂ ಇನ್ನು ಕ್ರಿಕೆಟಿಗೆ ವಿದಾಯ ಹೇಳು ಎಂದು ಒತ್ತಡಗಳನ್ನು ಹಾಕುತ್ತಿದ್ದರೂ,ಕೊಂಕು ಮಾತಾಡಿದರೂ, ವಿದಾಯ ಹೇಳುವ ವಯಸ್ಸಾಗಿಲ್ಲ ಎಂದು ದ್ವಿಸೆಂಚುರಿ ಬಾರಿಸಿ, ಉತ್ತರಿಸಿದರು. ಇದು ಕಣ್ರಿ.. ಗಟ್ಸ್!!! 🙂
– ನಲ್ಮೆಯಿಂದ
ದಿವ್ಯ